ಈ ಬಾರಿ ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ರಾಜ್ಯದ ಸುಂದರ ಜಲಪಾತಗಳಲ್ಲಿ ಒಂದಾದ ಗಗನಚುಕ್ಕಿಯ ಸೌಂದರ್ಯ ಇಮ್ಮಡಿಯಾಗಿದೆ. ದೂರದೂರಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಾನೂ ಅವರಲ್ಲಿ ಒಬ್ಬನಾಗಿ ಭೇಟಿ ನೀಡಿದ್ದೆ. ಕೆಲವು ಫೋಟೋಗಳು ಇಲ್ಲಿವೆ. ನೋಡಿ, ಅನಿಸಿಕೆ ತಿಳಿಸಿ.
ಶಿವನ ಸಮುದ್ರದ ಸುತ್ತಲೂ ಹಸಿರಿನ ಹೊದಿಕೆ. ಹಾಗೆ ನಮ್ಮ ದೃಷ್ಟಿಯನ್ನು ಸ್ವಲ್ಪ ಮೇಲಕ್ಕೆ ಹರಿಸಿದಾಗ ಕಾಣಿಸುವುದೇ ದೃಶ್ಯ ಕಾವ್ಯ. ಅಲ್ಲೇ ಎಲ್ಲೋ ದೂರದಲ್ಲಿ ಭೂಮಿತಾಯಿ ಮತ್ತು ಆಕಾಶ ಸುಖ-ದುಃಖ ವಿಚಾರಿಸಿಕೊಳ್ಳುತ್ತಿವೆಯೋ, ಅದೇ ರೀತಿ ಹತ್ತಿಯ ಉಂಡೆಯಂತೆ ಕಾಣುವ ಮೋಡವನ್ನು ತಮ್ಮ ಮಧ್ಯವರ್ತಿಯಾಗಿ ಇಟ್ಟುಕೊಂಡಿವೆಯ ಎನ್ನುವ ಸಂಶಯ ಸಹಜವಾಗಿ ಮೂಡುತ್ತಿದೆ...!
ದೂರದಿಂದಲೇ ಕೈಬೀಸಿ ಕರೆಯುವ ಹಾಲಿನ ಹೊಳೆಯಂತಹ ಜಲಧಾರೆ. ನೋಡುತ್ತಾ ನಿಂತರೆ ಇನ್ನಷ್ಟು ನೋಡಬೇಕು ಅನಿಸುವ ರುದ್ರ ರಮಣೀಯತೆ. ಎದುರಿಗೇ ನನ್ನದೊಂದು ಕುಟೀರ ಇರಬಾರದೇ ಎನ್ನುವ ಒಳ ಮನಸ್ಸು..! ಧೋ ಎಂದು ಕಾವೇರಿ ಮಾತೆ ಕೆಳಗಿಳಿಯುತ್ತಿದ್ದರೆ ಅಲ್ಲೊಂದು ಮಂಜಿನ ಲೋಕದ ಸೃಷ್ಟಿ. ಆ ನೀರ ಹನಿಗಳ ನಡುವಿಂದ ಸೂರ್ಯ ರಶ್ಮಿ ಹಾಯ್ದು ಬಂದಾಗ ಮೂಡುವ ಕಾಮನ ಬಿಲ್ಲು.
ಜೊತೆಗೆ ಬಾರದ ಪ್ರಿಯತಮೆಯ ನೆನೆಯುತ್ತಾ ಬಣ್ಣದ ಬಿಲ್ಲನ್ನು ದಿಟ್ಟಿಸುತ್ತಿದ್ದಂತೆ ಕಿಚಿಪಿಚಿ ಎನ್ನುತ್ತಾ ಅಲ್ಲೇ ಸುಳಿದಾಡುವ ಪ್ರಣಯ ಪಕ್ಷಿಗಳು...! ಹ್ನೂ..!! ಅದೇನೇ ಇರಲಿ, ಅಬ್ಬಾ..! ಈ ಪ್ರಕೃತಿ ಇಂತಹ ಅದೆಷ್ಟು ಅಚ್ಚರಿಗಳನ್ನು ತನ್ನ ಮಡಿಲಲ್ಲಿ ಹುದುಗಿಸಿ ಇಟ್ಟಿದೆಯೋ, ತಿಳಿದವರಾರು..?! ಅನ್ನೋ ಕುತೂಹಲ ಒಂದು ಕ್ಷಣ ನಮ್ಮನ್ನು ಕಾಡುತ್ತದೆ. ಒಟ್ಟಿನಲ್ಲಿ ಪ್ರತಿ ವರ್ಷವೂ ಇದೆ ರೀತಿ ಮಳೆಯಾಗಿ, ನಾಡಿನ ನದಿಗಳು ಭರ್ತಿಯಾಗಲಿ. ಉಣ್ಣುವ ಅನ್ನಕ್ಕೆ, ನೋಡುವ ಕಣ್ಣಿಗೆ ಸಂತಸ ನೀಡಲಿ ಎಂಬುದೇ ಸಕಲ ಜೀವ ರಾಶಿಯ ಪ್ರಾರ್ಥನೆಯಾಗಲಿ... ಅಲ್ಲವೇ...!?