Tuesday, June 18, 2013

ಹರಿಹರರ ಸನ್ನಿಧಿಯಲ್ಲಿ..

ದಾವಣಗೆರೆ ಜಿಲ್ಲೆಗೆ ಬಂದ ನಂತರ ಸ್ವಲ್ಪ ತಿರುಗಾಡಬೇಕು. ಊರು ನೋಡಬೇಕು ಎಂದುಕೊಂಡು ವಾರದ ರಜಾದಲ್ಲಿ ಒಂದು ದಿನ ಬೆಳಗ್ಗೆಯೇ ಕ್ಯಾಮೆರಾ, ಬ್ಯಾಗ್ ಬೆನ್ನಿಗೇರಿಸಿ ಬೈಕ್ ಏರಿದೆ. ಎಲ್ಲಿಗೆ ಪಯಣ..? ಗೊತ್ತಿಲ್ಲ..! ಎಲ್ಲಿಗೆ ಹೋಗೋದು ಎಂದು ಹೊಳೀತಿಲ್ಲ..!
 
ಆಗ ಇದ್ದಕ್ಕಿದ್ದಂತೆ ನೆನಪಾಗಿದ್ದು ಜಿಲ್ಲಾ ಕೇಂದ್ರದಿಂದ ಕೇವಲ 14 ಕಿಲೋಮೀಟರ್ ದೂರದಲ್ಲಿರುವ ಹರಿಹರ. ರಸ್ತೆ ತುಂಬಾ ಚೆನ್ನಾಗಿತ್ತು. ಇನ್ನೂ ಮುನ್ನಡೆ ಎಂದು ಪ್ರೇರೇಪಿಸಿತ್ತು. ಎಕ್ಸಲರೇಟರ್ ಹಿಡಿದೇ ಇದ್ದೆ. ಸುಮಾರು 20 ನಿಮಿಷಗಳಲ್ಲೇ ದೇಗುಲ ತಲುಪಿದ್ದೆ.
 
 
ನಕ್ಷತ್ರಾಕಾರದ ಸುಂದರ ಮಂದಿರ. ಹರಿಹರರಿಗೆ ಪ್ರಸನ್ನ ಪರಿಸರ..! ಇತಿಹಾಸದ ಪುಟಗಳಲ್ಲಿ ಇಣುಕಿದರೆ 11ರಿಂದ 13ನೇ ಶತಮಾನದಲ್ಲಿ ಈ ಪ್ರದೇಶ ಹೊಯ್ಸಳರ ಆಡಳಿತದಲ್ಲಿತ್ತೆಂದು ಗೊತ್ತಾಗುತ್ತದೆ. ಗುಹಾರಣ್ಯ ಎಂದೂ ಕರೆಯಲಾಗುತ್ತಿದ್ದ ಇಲ್ಲಿ 12ನೇ ಶತಮಾನದಲ್ಲಿ ಸಂಪೂರ್ಣ ಕಲ್ಲಿನಿಂದಲೇ  ದೇಗುಲ ನಿರ್ಮಾಣ ಮಾಡಲಾಯಿತು. ಈ ದೇಗುಲದ ಮೇಲೂ ಪರಕೀಯರ ದಾಳಿಯ ಕುರುಹು ಇಂದಿಗೂ ಇಲ್ಲಿನ ಕೆತ್ತನೆಗಳಲ್ಲಿವೆ. ತುಂಗಾಭದ್ರಾ ನದಿ ದಡದಲ್ಲಿರುವ ಈ ದೇಗುಲವನ್ನು ನನ್ನ ಕ್ಯಾಮೆರಾ ಕಣ್ಣಿನಲ್ಲಿ ಕಾಣುವ ಯತ್ನ ಇಲ್ಲಿದೆ.
 
ದೀಪಸ್ತಂಭದ ಮೂಲಕ ದೇಗುಲ ಕಂಡಿದ್ದು ಹೀಗೆ.
 
ಗರ್ಭಗುಡಿಯ ಪ್ರವೇಶದ್ವಾರಗಳಲ್ಲಿ ಇದೂ ಒಂದು.
 
ದೇಗುಲದ ಹೊರಾಂಗಣದಲ್ಲಿರುವ ಒಂದು ಕೆತ್ತನೆ.
 
ದೇವಸ್ಥಾನದ ಗೋಡೆಯಲ್ಲಿರುವ ಗೋಪುರ ಮಾದರಿಯ ಕೆತ್ತನೆ.
 
ಗರ್ಭಗುಡಿಯ ಗೋಡೆಯ ಹೊರಗಿರುವ ಏಕದಂತನ ಪ್ರತಿಮೆ.
 
 ನಂದಿಯ ಸುಂದರ ವಿಗ್ರಹ.
 
ಗೋಡೆಗಳ ಮೇಲೆ ಸುಂದರ ಕೆತ್ತನೆಗಳ ಆಕರ್ಷಣೆ.

ದೇವಾಲಯದ ಛಾವಣಿಗೂ ಆಕರ್ಷಕ ಕೆತ್ತನೆಗಳ ಅಲಂಕಾರ. 
ಕಣ್ಮನ ಸೆಳೆಯುವ ಕಲ್ಲಿನ ಕಂಬಗಳ ಕೆತ್ತನೆ.
 

Friday, June 14, 2013

ಇಲ್ಲೇ ಇದ್ದು ಬಿಡುವಾಸೆ, ಆದರೆ..

ಇಲ್ಲೇ ಇದ್ದು ಬಿಡುವಾಸೆ.. ಇದೇ ಕ್ರಿಕೆಟ್ ಪಿಚ್‍ನಲ್ಲಿ ಚೆಂಡನ್ನು ಮತ್ತೊಮ್ಮೆ ಸಿಕ್ಸರ್, ಬೌಂಡರಿಗಳಿಗೆ ಅಟ್ಟುವ ಆಸೆ..
 
ಕಂಡೂ ಕಾಣದಂತಿರುವ ಗಿಡ, ಪೊದೆಗಳ ಜತೆ ಕಣ್ಣಾಮುಚ್ಚಾಲೆ ಆಡುವಾಸೆ.. ಆದರೆ.. 
 

  
ಎದುರು ಬಿಳಿಯ ಬಟ್ಟೆ.. ಅದರೊಳಗೆ ಯಾರೋ ಅಡಗಿ ಕುಳಿತು ಅವರ ಕರಿ ತಲೆ ಮಾತ್ರ ಕಂಡು ಗಾಳಿಯಲ್ಲಿ ಪಿಸುಮಾತು ತೇಲಿಬಂದಂತೆ..





 
ಕೈ ಗಡಿಯಾರದಲ್ಲಿ ಬೆಳಗಿನ ಒಂಬತ್ತು ಗಂಟೆ. ಇನ್ನೂ ಬಿಸಿಲಿನ ಸುಳಿವಿಲ್ಲ. ರಾತ್ರಿ ತಂಗಿದ್ದಕ್ಕೆ ಬಾಡಿಗೆ ನೀಡದೇ ಮನೆ ಖಾಲಿ ಮಾಡಲು ಬಿಡೆ ಎಂದು ಸೂರ್ಯ ಕಿರಣಕ್ಕೆ ಮಂಜು ಅಡ್ಡಗಟ್ಟಿದಂತೆ..!
 


20 ಅಡಿ ದೂರಕ್ಕೂ ದೃಷ್ಟಿ ಹರಿಯದಂತೆ ಸುರಿದ ಹಾಲ್ನೊರೆಯಂತೆ. ನಡುವೆಯೇ.. ಹಸಿರು ಗಿಡಗಳು ತೊಟ್ಟಿಕ್ಕುತ್ತಿವೆ. ಅದು ಅಳುವೋ.. ಆನಂದ ಬಾಷ್ಪವೋ ತಿಳಿಯಬೇಕು.. ಆದರೆ..
 
 
 
 
 
 
 
 
 ಕಲ್ಪನಾ ಲೋಕದಲ್ಲೇ ಉಳಿದುಬಿಟ್ಟರೆ ನಗರದಲ್ಲಿ ಕಂಡುಕೊಂಡಿರುವ ಉದ್ಯೋಗ, ಸಂಪಾದನೆ ಏನಾಗಲಿದೆ..? ಕನಸು ಕೇವಲ ಜೇಡರ ಬಲೆಯೊಳಗೆ ಕಾಣಿಸಿದ ಮಂಜಿನ ಮುತ್ತಿನಂತೆ..
 
 
 
ಸುಂದರ ಹೂವು ಬೇಕೆಂದರೆ ಮುಳ್ಳಿನ ಸವಾಲನ್ನೂ ಎದುರಿಸಲೇಬೇಕಲ್ಲವೇ..?
 
 
 
 
 
ದಿನವೂ ಕಂಡಿದ್ದನ್ನೇ ಕಂಡರೆ ಬೇಜಾರು ಖಂಡಿತ.. ನನ್ನಂಥವನಿಗೆ ಈ ದೃಶ್ಯ ಅಪರೂಪಕ್ಕೊಮ್ಮೆ ಸವಿಯಲೇ ಸೊಗಸು.. ವಾಸ್ತವಕ್ಕೆ ಬಂದಾಗ ಎಲ್ಲವೂ ಸ್ಪಷ್ಟ.. ಎಂದಿನಂತೆ ಸುಂದರ.. ಲವಲವಿಕೆಯ ಆಗರ..!
 
 
 
 
 
 
 
 
 
  • ಚಳಿಗಾಲದ ಆರಂಭದಲ್ಲಿ ಮತ್ತು ಕೊನೆಯ ದಿನಗಳಲ್ಲಿ ನಮ್ಮೂರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕಲ್ಮಡ್ಕ ಯಾವುದೇ ಹಿಲ್ ಸ್ಟೇಷನ್‍ಗಿಂತ ಕಡಿಮೆಯೇನಲ್ಲ. ಅಂತಹ ಒಂದು ದಿನದ ಫೊಟೋಗಳು ಇಲ್ಲಿವೆ.

Monday, June 3, 2013

ಐತ ಮತ್ತು ಒತ್ತೆಕೋಲ

   ತ. ಅವನೊಬ್ಬ ನಿಷ್ಪ್ರಯೋಜಕ.. ಎಂಥದ್ದಕ್ಕೂ ಲಾಯಕ್ಕಲ್ಲದವ. ಹೆಂಡತಿ ಮಕ್ಕಳಿಗೆ ಊಟಕ್ಕೆ ಗತಿಯಿಲ್ಲದಿದ್ದರೂ ಅಡ್ಡಿಯಿಲ್ಲ, ಕಿವಿತುಂಬ ಬೈಗುಳ, ಮೈತುಂಬ ಹೊಡೆತ ಮಾತ್ರ ಒಂದು ದಿನವೂ ತಪ್ಪಿದ್ದಲ್ಲ. ಇವನ ಸ್ತುತಿ ಇನ್ನೂ ಇದೆ. ಕೂಲಿ ಕೆಲಸ ಮಾಡಿ ಸಿಕ್ಕ 50 ರೂಪಾಯಿಯಲ್ಲಿ ಬಹುಪಾಲು `ಅದಕ್ಕೆ' ಮೀಸಲು..! ಎಲೆ, ಅಡಿಕೆ, ಗುಟ್ಕಾ ಜಗಿದು ಬಾಯಿಗೆ ಕೆಂಪು ಕೋಟೆಯ ಸ್ವರೂಪ..! ಪೊಟ್ಟು ಬೀಡಿಯ ಧಮ್ ಶ್ವಾಸಕೋಶ ಸೇರದಿದ್ದರೆ ಮೈಗೆ ಗಾಳಿ ಸೇರುವುದಿಲ್ಲ ಎಂಬ ಪರಿಸ್ಥಿತಿ. ತಲೆಗೆ ಕೊಬ್ಬರಿ ಎಣ್ಣೆ ಕಾಣದೇ ಕೂದಲು ತಿಂಗಳುಗಟ್ಟಲೆ ಗಂಟುಕಟ್ಟಿದ್ದರೂ ಪರವಾಗಿಲ್ಲ. ಹೊಟ್ಟೆಗೆ ಮಾತ್ರ ಎಣ್ಣೆ ಬೀಳಲೇಬೇಕೆಂಬ ಅಲಿಖಿತ ನಿಯಮ ಇಟ್ಟುಕೊಂಡವನು. ಸದಾ ಬೇಸರದ ಮುಖ ಹೊತ್ತೇ ಸಾಗುವವನು. ನಾನು 15 ವರ್ಷಗಳ ಹಿಂದೆ ಓದುವುದಕ್ಕಾಗಿ ಪಟ್ಟಣಕ್ಕೆ ಬರುವಾಗ ಅವನು ಹೇಗಿದ್ದನೋ ಈಗಲೂ ಹಾಗೇ ಇದ್ದಾನೆ ಅಂತ ಅಮ್ಮ ಒಮ್ಮೆ ಹೇಳಿದ್ದ ನೆನಪು.

 
    ಆದರೆ, ಇಂದು ನಾನು ಕಾಣುತ್ತಿರುವ ಐತನಿಗೂ ಅಮ್ಮ ಫೋನಿನಲ್ಲಿ ಹೇಳಿದ್ದ ಐತನಿಗೂ ಅಜಗಜಾಂತರ ವ್ಯತ್ಯಾಸ ಕಾಣ್ತಿದೆಯಲ್ಲ..! ಅವನ್ನಲ್ಲೇನೋ ಬದಲಾವಣೆ ಇದೆ. ಹೊಸ ಚೈತನ್ಯ ಅವನನ್ನು ಆವರಿಸಿಕೊಂಡಂತಿದೆ. ಕಳೆದ ಎರಡು ಮೂರು ದಿನಗಳಿಂದಲೇ ಆತನ ನಡವಳಿಕೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಬಸವನಹುಳದಂತಿದ್ದವನು ಇಂದು ಲವಲವಿಕೆಯಿಂದ ಓಡಾಡುತ್ತಿದ್ದಾನೆ. ಎಲ್ಲಕ್ಕೂ ಮಿಗಿಲಾಗಿ ಮೇಲೆ ಹೇಳಿದ ಐತನೇ ಇವನಾ ಎನ್ನುವಷ್ಟು ಬದಲಾಗಿದ್ದಾನೆ. ಅಮ್ಮ ಕೂಡ ಇದನ್ನು ಗಮನಿಸಿದ್ದಾರೆ. 
  
    ಯಾವತ್ತೂ ಹಾಸಿಗೆಯಿಂದ ಎದ್ದು ನಿತ್ಯಕರ್ಮ ಮುಗಿಸಿ ಸೀದಾ ಕೆಲಸಕ್ಕೆ ಹೋಗುತ್ತಿದ್ದವನು ಇವತ್ತು ಬೆಳಗ್ಗೆಯೇ ಎದ್ದು ಕೋಲ್ಗೇಟು ಪೇಸ್ಟನ್ನು ನಿನ್ನೆ ಎಲೆ ಅಡಿಕೆ ತಿನ್ನುವಾಗ ಹಚ್ಚಿದ್ದ ಸುಣ್ಣವಿದ್ದ ತನ್ನ ತೋರು ಬೆರಳಿಗೆ ಮೆತ್ತಿ `ಕೆಂಪುಕೋಟೆ ಬಾಗಿಲ'ನ್ನು ತಾಜ್‍ಮಹಲ್ ಮಾಡುವ ಯತ್ನ ಮಾಡಿದ್ದಾನೆ..! ನಂತರ ಬಾವಿಯಿಂದ ನೀರು ಎತ್ತಿ ಮೈಗೆ ಹಾಕಿಕೊಂಡು ಅದ್ಯಾವುದೋ ಘಮಘಮ ಸೋಪನ್ನು ಮೈಗೆ ಎರಡು ಮೂರು ಬಾರಿ ತಿಕ್ಕಿ ತೊಳೆದಿದ್ದಾನೆ. ಇದೂ ಸಾಲದು ಅಂತ ನೀಲಿ ಬಣ್ಣದ ಶಾಂಪೂ ಪ್ಯಾಕೇಟನ್ನು ಒಡೆದು ಸ್ನಾನವಾದ ನಂತರ ಕಂಕುಳಗಳಿಗೆ ಹಚ್ಚಿಕೊಂಡು ಮೂಸಿ ನೋಡಿಕೊಂಡಿದ್ದಾನೆ. ಕನ್ನಡಿ ಮುಂದೆ ನಿಂತು ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿ ಒಪ್ಪವಾಗಿ ತಲೆ ಬಾಚಿ `ನಾನು ಇಷ್ಟೊಂದು ಚೆಂದ ಇದ್ದೇನಾ' ಅಂತ ಎರಡು ಮೂರು ಸರ್ತಿ ನೋಡಿಕೊಂಡಿದ್ದಾನೆ.
 
    ಯಾವತ್ತೂ ಕೂಡ ನಮ್ಮ ಊರಿನಲ್ಲಿ ಇಷ್ಟೊಂದು ದೊಡ್ಡದಾಗಿ ಮೈಕು, ಪಟಾಕಿ, ಗರ್ನಾಲ್, ವಾದ್ಯಗಳ ಸದ್ದು ಕೇಳಿದ್ದೇ ಇಲ್ಲ. ಬೈಸಾರಿಯಾದರೆ ಸಾಕು ಮನೆಗಳತ್ತ ಸಾಗುವ ಜನ ಇವತ್ತು ಊರ ಬಯಲಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ರಾತ್ರಿ ಎಂಟಾದರೆ ಹೊದ್ದು ಮಲಗುವ ಗ್ರಾಮ ನಮ್ಮದು. ಡಾಕ್ಟ್ರ ಮನೆಯಿಂದಲೋ ಇಲ್ಲಾ ಜಿನ್ನಪ್ಪನ ಮನೆಯಿಂದಲೋ ನಾಯಿಗಳು ಬೊಗಳುವ ಶಬ್ದ ಬಿಟ್ಟರೆ ಮತ್ತೇನೂ ಕೇಳದಷ್ಟು ನಿಶ್ಶಬ್ದವಿರುತ್ತದೆ. ರಾತ್ರಿ ಏಳೂಮುಕ್ಕಾಲಕ್ಕೆ ವಾಹನದ ಸದ್ದು ಕೇಳಿದರೆ ಅದು ರಾತ್ರಿ ಹಾಲ್ಟ್ ಬಸ್ ಎಂದೇ ಊರಿನ ಅಷ್ಟೂ ಜನರಿಗೆ ತಿಳಿಯುತ್ತದೆ. ಅದರ ಆಧಾರದಲ್ಲೇ ನಾಳೆ ಪೇಟೆಗೆ ಹೋಗುವ ಕಾರ್ಯಕ್ರಮ ನಿಗದಿಯಾಗುತ್ತದೆ..! ಆದರೆ, ಇವತ್ತು ಹಾಗಿಲ್ಲ. ಈಗ ಗಂಟೆ ರಾತ್ರಿ ಎಂಟು ಕಳೆದಿದೆ. ಆದರೂ ವಾಹನಗಳು ಒಂದೊಂದಾಗಿ ಬರುತ್ತಲೇ ಇವೆ. ಜನರ ತಂಡವೂ ಕೂಡ. ಇಷ್ಟೆಲ್ಲಾ ತಲೆಕೆಡಿಸಿಕೊಂಡು ಯೋಚನೆ ಮಾಡ್ತಿರುವಾಗ ಅಡುಗೆ ಕೋಣೆಯಿಂದ ಅಮ್ಮ, `ಶಿವೂ.. ಒತ್ತೆಕೋಲ ನೋಡೋದಕ್ಕೆ ಹೋಗೋದಿಲ್ವೇನೋ..?' ಎಂದರು. ಓ.. ಹೌದಲ್ಲಾ.. ಇವತ್ತು ವಿಷ್ಣುಮೂರ್ತಿ ಒತ್ತೆಕೋಲ. ಗ್ರಾಮದಲ್ಲಿ ವರ್ಷಾವಧಿ ಜಾತ್ರೆ. ಇಷ್ಟೆಲ್ಲಾ ಬದಲಾವಣೆ ಈ ದಿನ ಕಂಡುಬಂದಿದ್ದು ಇದೇ ಕಾರಣಕ್ಕೆ. ನಿಜ. 15 ವರ್ಷಗಳಲ್ಲಿ ಸಾಕಷ್ಟು ಸರ್ತಿ ಮನೆಗೆ ಬಂದಿದ್ದರೂ ಒಮ್ಮೆಯೂ ಒತ್ತೆಕೋಲ ನಡೆಯುವ ಸಂದರ್ಭದಲ್ಲಿ ಬಂದಿರಲಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಚಾಕರಿಗೆ ಎಂತಾನೇ ನಮ್ಮ ಜೀವನ ಒತ್ತೆಯಾಗಿರುವಾಗ ಊರಿನ ಒತ್ತೆಕೋಲ ನೋಡುವುದಕ್ಕೆ ಬರಲು ಹೇಗೆ ಸಾಧ್ಯ ಎಂದುಕೊಳ್ಳುತ್ತಾ, `ಹೋಗ್ತೀನಮ್ಮಾ.. ಸ್ನಾನ ಮಾಡ್ಕೊಂಡು ಬರ್ತೇನೆ' ಎಂದು ಎದ್ದು ನಿಂತೆ.
 
  ಮುಗಿಲೆತ್ತರಕ್ಕೆ ವ್ಯಾಪಿಸಿದ್ದ ಕೆಂಪು ಬೆಂಕಿ. ಅದರ ಮಧ್ಯೆ ಧಗಧಗಿಸುತ್ತಿರುವ ಮರದ ದಿಮ್ಮಿಗಳು. ಅದಕ್ಕೆ ಬಾಲ್ದಿಯಲ್ಲಿ ತುಪ್ಪ ಎರೆಚುತ್ತಿರುವ ಒಂದಷ್ಟು ಮಂದಿ. ಅಬ್ಬಾ.. ಎಷ್ಟು ಭಯಂಕರವಾಗಿದೆಯಲ್ಲಾ ಎಂದುಕೊಂಡು ಆಚೆ ಈಚೆ ನೋಡಿದೆ. ಅಷ್ಟರಲ್ಲಿ ನನ್ನ ಪಕ್ಕದಲ್ಲೇ ಐತ ನಗುತ್ತಾ ನಿಂತಿದ್ದ. `ಮೇಲೇರಿಗೆ ಬೆಂಕಿ ಕೊಡುವ ಹೊತ್ತಿಗೆ ನೀವು ಬರ್ಲಿಲ್ವಾ..?' ಎಂದ. `ಇಲ್ಲಾ.. ಅದೂ... ಮನೆಯಲ್ಲಿ ಒಂಚೂರು ಕೆಲಸ ಇತ್ತು.. ಹಾಗೇ..' ಎಂದು ಹೇಳುವಷ್ಟರಲ್ಲಿ ಅವನ ಗಮನ ಸ್ವಲ್ಪ ದೂರದಲ್ಲಿ ಶುರುವಾಗಿದ್ದ ಸಭಾ ಕಾರ್ಯಕ್ರಮದತ್ತ ಸಾಗಿತು. `ದನಿಗಳು ಎಂತ ಹೇಳ್ತಾರೆ ಕೇಳುವ ಬನ್ನಿ.. ದೈವಸ್ಥಾನವನ್ನು ಇನ್ನೂ ಚೆಂದ ಮಾಡ್ಲಿಕ್ಕೆ ಎಂತಾದರೂ ಹೇಳ್ಯಾರು..' ಎನ್ನುತ್ತಾ ಕುರ್ಚಿಯ ಕಡೆಗೆ ಹೆಜ್ಜೆ ಹಾಕಿದ. ಎಲಾ ಇವನಾ.. ಮಣ್ಣು ಹಿಡಿದ ಕಂಬಾಯ್‍ನಲ್ಲಿ ಇರ್ತಿದ್ದವನು ಇವತ್ತು ಬಣ್ಣದ ಬಿಳಿ ಪಂಚೆ ಉಟ್ಟು, ಹೆಗಲಿಗೆ ಅಚ್ಚಬಿಳಿಯ ಶಾಲು ಹೊದಿಸಿ ಹಣೆಗೆ ದೊಡ್ಡಕ್ಕೆ ಉದ್ದಕ್ಕೆ ಕುಂಕುಮ ಬೊಟ್ಟು ಇಟ್ಟ ಅವತಾರವೇ..!
   
    ಮನಸ್ಸಿನಲ್ಲೇ ನಗುತ್ತಾ ಹಿಂದಕ್ಕೆ ತಿರುಗಿ ನೋಡಿದರೆ ಮೇಲೇರಿ, ಅಂದರೆ ಕಟ್ಟಿಗೆಯ ರಾಶಿಯಲ್ಲಿ ಬೆಂಕಿಯ ಅಕ್ಷರಶಃ ನರ್ತಿಸುತ್ತಿತ್ತು. ಚಳಿಗಾಲವಿದ್ದರೂ ಸುತ್ತಮುತ್ತಲಿನ ವಾತಾವರಣ ಅತಿ ಹೆಚ್ಚು ಬಿಸಿಯೇರಿತ್ತು. ಪಕ್ಕದಲ್ಲಿರಲಿ, ಕನಿಷ್ಠ 40-50 ಮೀಟರ್ ದೂರಕ್ಕೂ ಶಾಖದ ಸ್ಪರ್ಶವಾಗುತ್ತಿತ್ತು.
   

    ಊರಿನ ಹಲವು ಪರಿಚಯಸ್ಥ ಮುಖಗಳೊಂದಿಗೆ ಒಂದಿಷ್ಟು ಹರಟೆ ಹೊಡೆಯುತ್ತಾ ಹಳ್ಳಿ-ಪಟ್ಟಣಗಳ ನಡುವೆ ಮಾತಿನ ಓಘವನ್ನು ಹರಿಯ ಬಿಡುತ್ತಾ ಕಾಲ ಕಳೆದಿದ್ದಾಯಿತು. ಅಷ್ಟರಲ್ಲಿ ಸಭಾ ಕಾರ್ಯಕ್ರಮ ಮುಗಿದು `ಆಟ' ಶುರುವಾಗುವ ಲಕ್ಷಣ ಕಾಣಿಸಿತು. ವೇದಿಕೆ ಹಿಂಬದಿಯಿಂದ ಚೆಂಡೆಯ ಪೀಠಿಕೆ ಕೇಳಿಸಿತು. ತುಳುನಾಡಿನಲ್ಲಿ ನಡೆಯುವ ಹಿಂದೂ ಧರ್ಮದ ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಇದ್ದೇ ಇರುತ್ತದೆ. ನಮ್ಮೂರಿನಲ್ಲಿ ಸಾಮಾನ್ಯವಾಗಿ ವೃತ್ತಿಪರ ಕಲಾವಿದರನ್ನು ಕರೆಸುವ ವಾಡಿಕೆಯಿಲ್ಲ. ಯಾಕೆಂದರೆ, ಸ್ಥಳೀಯ ಕಲಾವಿದರಿಗೆ ಇದರಿಂದ ಅವಕಾಶ ಸಿಗುತ್ತದೆ, ಹಾಗೇ ಮೇಳಗಳ ಕಲಾವಿದರಿಗೆ ದುಬಾರಿ ಸಂಭಾವನೆ ಕೊಡುವುದು ತಪ್ಪುತ್ತದೆ ಎಂಬ ಉದ್ದೇಶ. ಇದು ಒಳ್ಳೆಯದೇ.. ಇರಲಿ.. ಆಟ ಶುರುವಾಯಿತು.. ನನಗೂ ಆಸಕ್ತಿ.. ಸಾಕಷ್ಟು ವರ್ಷಗಳ ಬಳಿಕ ಆಟ ನೋಡುತ್ತಿದ್ದೇನೆ. ಚೆಂಡೆಯ ಪೆಟ್ಟಿಗೆ ಕುಣಿತ ಬಾರದ ನಾನೂ ಕುಣಿದುಬಿಡಲೇ ಎನ್ನುವಂಥ ಹುಚ್ಚೇಳುತ್ತಿದೆ. ಒಂದೊಂದೇ ಪಾತ್ರಗಳು ಬಂದು ಹೋದವು. ಅಸುರಗಣ ಮತ್ತು ದೇವ ಗಣಗಳ ನಡುವೆ ಯುದ್ಧದ ಸಂದರ್ಭ. ಬಣ್ಣದ ವೇಷ.. ತಡ್ಪೆ ಕಿರೀಟ.. ಕೈಯಲ್ಲಿ ಕತ್ತಿ.. ಅದ್ಭುತ ಪೋಷಾಕು. ರಕ್ಕಸ ಪಾತ್ರಧಾರಿ ದೇವೇಂದ್ರನ ಪಾತ್ರಧಾರಿಗೆ ಯುದ್ಧಕ್ಕೆ ಆಹ್ವಾನ ಕೊಟ್ಟ. `ಎಲವೋ ದೇವೇಂದ್ರ.. ನಿನ್ನ ಹೇಡಿ ಹಿಂಬಾಲಕರನ್ನು ಪುಡಿಗಟ್ಟಿ ಅಟ್ಟಿರುವೆ. ನಿನ್ನಲ್ಲಿ ಕಿಂಚಿತ್ತು ಧೈರ್ಯವಿದ್ದರೂ ಬಾ ಯುದ್ಧಕ್ಕೆ...' ಎಂದ. ಇದಕ್ಕೆ ಪ್ರತಿಯಾಗಿ ದೇವೇಂದ್ರ ಕೂಡ ವಾಗ್ಝರಿ ಹರಿಯಬಿಡಬೇಕು. ರಾಕ್ಷಸ ಪಾತ್ರಧಾರಿಯನ್ನು ಉದ್ದೇಶಿಸಿ, `ನಿನ್ನ ತಲೆಗೆ ಎಮ್ಮೆ ಅತ್ತಿದೆ.. ನನ್ನನ್ನು ಹೇನೆಂದು ಬಲ್ಲೆ..' ಎಂದ.. ಸೇರಿದ್ದ ಇಡೀ ಪ್ರೇಕ್ಷಕ ಸಮೂಹದಲ್ಲಿ ನಗೆಯ ಅಲೆ ತೇಲಿಬಂತು..!
   
    ಇಷ್ಟೆಲ್ಲದರ ನಡುವೆಯೂ ನನ್ನ ಗಮನವೆಲ್ಲ ಇದ್ದಿದ್ದು ಒತ್ತೆಕೋಲದ ಕಡೆಗೆ. ತಿರುಗಿ ನೋಡಿದರೆ ಅಲ್ಲಿ ಬೆಂಕಿ ಆರಿತ್ತು. ಒಂದಷ್ಟು ಜನ ಉದ್ದನೆಯ ಹಸಿ ಬಿದಿರಿನ ದೊಡ್ಡ ಗಳ ಹಿಡಿದು ಬರುತ್ತಿದ್ದರು. ಯಕ್ಷಗಾನವನ್ನು ಅರ್ಧಕ್ಕೇ ಬಿಟ್ಟು ಹಿಂದೆ ಹೆಜ್ಜೆ ಹಾಕಿದೆ. ಆಕಾಶವನ್ನೂ ಸುಟ್ಟುಬಿಡುವೆ ಎಂದು ಕುಣಿದಿದ್ದ ಬೆಂಕಿ ತಣ್ಣಗಾಗಿತ್ತು. ಬಿದಿರು ಇಲ್ಲಿಗೇಕೆ ಎಂದುಕೊಂಡು ನೋಡುತ್ತಿದ್ದಂತೆಯೇ, ನಾಲ್ಕೈದು ಮಂದಿ ಕೆಂಡದ ರಾಶಿಗೆ ಬಿದಿರನ್ನು ನುಗ್ಗಿಸಿ ಕಿಡಿಯನ್ನು ಮೇಲಕ್ಕೆ ಚಿಮ್ಮಿಸಿದರು. ಅಬ್ಬ.. ಆ ದೃಶ್ಯ ನನಗೆ ಈಗಲೂ ಕಣ್ಣಿಗೆ ಕಟ್ಟುವಂತಿದೆ. ಸುಡದೇ ಉಳಿದುಕೊಂಡಿದ್ದ ಮರದ ದಿಮ್ಮಿಗಳನ್ನು ಹುಡುಕಿ ತೆಗೆದು ಅವುಗಳನ್ನು ಪ್ರತ್ಯೇಕಗೊಳಿಸುವ ಪ್ರಕ್ರಿಯೆ ಇದು. ಸುಮಾರು ಅರ್ಧ-ಮುಕ್ಕಾಲು ಗಂಟೆಯ ಬಳಿಕ ಕೆಂಡದ ರಾಶಿ ಸಿದ್ಧವಾಯಿತು. ಅಷ್ಟರಲ್ಲಿ ಗಂಟೆ ಬೆಳಗಿನ ಜಾವ ಸುಮಾರು ನಾಲ್ಕು ಇರಬಹುದು. ಇದ್ದಕ್ಕಿದ್ದಂತೆ ಆಕಾಶಕ್ಕೆ ಸಿಡಿದ ಸುಡುಮದ್ದೊಂದು ಮುಂದಿನ ಏನೋ ಮುಖ್ಯ ಕಾರ್ಯಕ್ರಮವೊಂದರ ಮುನ್ಸೂಚನೆ ಕೊಟ್ಟಿತು. ನಿಜ. ನನ್ನ ಊಹೆ ಸುಳ್ಳಾಗಲಿಲ್ಲ. ವಾದ್ಯ ವೃಂದದವರೂ ಚುರುಕಾದರು. ಏರು ಧ್ವನಿಯಲ್ಲಿ ಒಂದು ರೀತಿಯ ಗಂಭೀರ ವಾತಾವರಣ ಸೃಷ್ಟಿಸುವಂತೆ ವಾದ್ಯ ನುಡಿಯುತ್ತಿದ್ದರೆ ಅಲ್ಲಿದ್ದ ವಾತಾವರಣ ಸಂಪೂರ್ಣವಾಗಿ ಪರವಶವಾಗಿತ್ತು.

    ಅದೋ.. ದೈವಸ್ಥಾನದ ಎದುರಿನಿಂದ ಕೆಂಡದ ರಾಶಿಯತ್ತ ಯಾರೋ ಓಡಿ ಬರುತ್ತಿದ್ದಾರಲ್ಲಾ... ಮತ್ತಿಬ್ಬರು... ಮತ್ತೆ ಮೂವರು.. ಕೈಯಲ್ಲಿ ಕತ್ತಿ ಹಿಡಿದಿದ್ದಾರೆ. ಬಿಳಿ ಪಂಚೆ ಉಟ್ಟು ಅದಕ್ಕೆ ಕೆಂಪು ಶಾಲನ್ನು ಬಿಗಿದಿದ್ದಾರೆ. ಅರೆ.. ಅವರ್ಯಾಕೆ ಕೆಂಡದ ರಾಶಿಯ ಮೇಲೆ ಓಡುತ್ತಿದ್ದಾರೆ..? ಅವರ ಕಾಲು ಸುಡುವುದಿಲ್ಲವೇ..? ಅವರಿಗೆ ಶಾಖ ತಟ್ಟುವುದಿಲ್ಲವೇ..? ಇಷ್ಟೆಲ್ಲಾ ಪ್ರಶ್ನೆಗಳೂ ಒಮ್ಮೆಗೇ ಮೂಡಿ ಬಂದರೆ ಉತ್ತರ ಸಿಗಲು ಸಾಧ್ಯವೇ ಹೇಳಿ..? ಇದಕ್ಕೆ ನಮ್ಮ ಐತನೇ ಉತ್ತರ ಹೇಳಲು ಸಾಧ್ಯ ಎಂದುಕೊಂಡು ಕೊರಳು ತಿರುಗಿಸಿದೆ. ಊಹ್ನೂ... ಎಲ್ಲೂ ಇಲ್ಲ... ಛೆ ಇಂಥ ಸಂದರ್ಭದಲ್ಲೇ ಈ ಮಾರಾಯ ಕೈ ಕೊಡಬೇಕಾ.. ಆಮೇಲೆ ಸಿಗ್ಲಿ.. ಜೋರು ಮಾಡಿ ಕೇಳ್ತೇನೆ ಎಂದು ಸ್ವಗತ ನುಡಿದೆ.
ಅಷ್ಟರಲ್ಲಿ ಮತ್ತೊಂದಷ್ಟು ಸುಡುಮದ್ದು ಊರಿಡೀ ಮಾರ್ದನಿಸಿತು. ಯಥಾಪ್ರಕಾರ ವಾದ್ಯ ವೃಂದವೂ.. ಗಂಟೆ ಅಷ್ಟೊತ್ತಿಗೆಲ್ಲ ಸುಮಾರು ಮುಂಜಾನೆ 5.30 ಆಗಿತ್ತು. ಹಿಂದೆ ನಿಂತಿದ್ದವರಲ್ಲಿ ಯಾರೋ ಹಿರಿಯರೊಬ್ಬರು, `ಭೂತ ಎದ್ದು ನಿಲ್ಲುವುದಕ್ಕೆ ಆಯ್ತು' ಎಂದರು. ಹೌದು.. ವಿಷ್ಣುಮೂರ್ತಿ ಭೂತದ ವೇಷ ಧರಿಸಿದ ವ್ಯಕ್ತಿ ಏನೇನೋ ಪಠಿಸುತ್ತಿದ್ದಾನೆ. ಮಲೆಯಾಳಂ ಭಾಷೆ ಎಂಬುದೊಂದು ಗೊತ್ತಾಗುತ್ತಿದೆಯಷ್ಟೆ. ಮೈ ತುಂಬ ತೆಂಗಿನ ಹಚ್ಚ ಹಸಿರಿನ ಗರಿ, ಮುಖಕ್ಕೆ ಕೆಂಪು, ಕಪ್ಪು ಬಣ್ಣಗಳ ಲೇಪನ. ನೋಡಿದೊಡನೆ ಭಯ, ಭಕ್ತಿ ಮೂಡುವ ರೀತಿ ಬಣ್ಣಗಳ ಬಳಕೆ. ಆ ವ್ಯಕ್ತಿಯ ಮುಖದಲ್ಲೇನೋ ಗಾಂಭೀರ್ಯ, ಕೈಯಲ್ಲಿ ದೊಂದಿ ಕೂಡ ಇದೆ. ಓ... ಆ ವ್ಯಕ್ತಿಯ ಮೈ ಮೇಲೆ ದೈವ ಆವಿರ್ಭವಿಸಿದೆ..! ಇಂತಹ ಸನ್ನಿವೇಶ, ಗಾಂಭೀರ್ಯದ ವಾತಾವರಣ ನಾನು ಕಂಡಿದ್ದೇ ಇಲ್ಲ. ಇದಕ್ಕೆಲ್ಲ ಏನು ಅರ್ಥ.. ಭೂತ ವೇಷಧಾರಿ ಏನು ಹೇಳುತ್ತಿದ್ದಾನೆ.. ಒಂದೂ ನನಗರ್ಥವಾಗುತ್ತಿಲ್ಲ. ಛೆ.. ನಾಲಾಯಕ್ ಐತ ಕೂಡ ಕಾಣಿಸುತ್ತಿಲ್ಲ. ಎಂಥ ಕೆಲಸ ಮಾಡಿದ.. ಎಲ್ಲಿ ಕುಡಿದು ಬಿದ್ದಿದ್ದಾನೋ.. ಎಂದುಕೊಂಡೆ.
 
ಕೆಂಪು ಬೆಂಕಿಯುಂಡೆ ರೀತಿಯ ಕಣ್ಣು.. ಹುಬ್ಬುಗಳನ್ನು ಮೇಲೆ ಕೆಳಗೆ ಕುಣಿಸುತ್ತ, ಹೂಂಕರಿಸುತ್ತಾ ಒಂದೊಂದಾಗಿ ಆಜ್ಞೆಗಳನ್ನು ದೈವ ಕೊಡುತ್ತಿದ್ದರೆ ಸೇರಿದ್ದ ಎಲ್ಲರೂ ಭಕ್ತಿ ಪರವಶರಾಗಿದ್ದರು. ನಿದ್ರೆಯ ಮಂಪರಿಗೆ ಜಾರಿದ್ದವರೆಲ್ಲ ಅದೇನೋ ಶಕ್ತಿ ಬಂದಂತಾಗಿ ಎದ್ದು ಕುಳಿತರು. ಮತ್ತೆ ಸುಡುಮದ್ದಿನ ಸದ್ದು. ವಾದ್ಯಗಳ ಮೇಲುಗೈ.. ಹೌದು.. ಊರಿನ ಜನರೆಲ್ಲ ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶದ ಮುಹೂರ್ತ ಕೂಡಿಬಂದಿದೆ. ಹಸಿರು ಗರಿಗಳನ್ನು ಮೈಗೆ ಸುತ್ತಿಕೊಂಡಿದ್ದ ದೈವದ ಪಾತ್ರಧಾರಿ ಕೆಂಡದ ಮೇಲೆ ಮಲಗಿದ್ದಾನೆ..! ನಿಗಿನಿಗಿ ಕಾದಿದ್ದ ಕೆಂಡವೇ ಹಾಸಿಗೆಯಾಗಿದೆ.. ಮೊದಲೇ ಹೇಳಿದ್ದೆನಲ್ಲ.. ಆಕಾಶದೆತ್ತರಕ್ಕೆ ಬೆಂಕಿ ಹಬ್ಬಿತ್ತು ಎಂದು.. ಆಗ 50 ಮೀಟರ್ ದೂರದಲ್ಲಿದ್ದಾಗಲೂ ಬಿಸಿ ತಡೆಯಲಾಗದೇ ದೂರ ನಿಂತವನು ನಾನು.. ನನ್ನ ಹಾಗೆಯೇ ಮತ್ತೊಂದಷ್ಟು ಮಂದಿ. ಆದರೆ, ಇಲ್ಲಿ ನೋಡಿದರೆ ದೈವದ ವೇಷದಲ್ಲಿರುವವನಿಗೆ ಬಿಸಿ ತಟ್ಟುತ್ತಿಲ್ಲವೇ ಎಂದು ಅನಿಸಿತು. ಇದು ಹೇಗೆ ಸಾಧ್ಯ ಎಂದು ಕೇಳೋಣ ಎಂದು ಆಚೀಚೆ ನೋಡಿದೆ. ಆದರೆ, ಎಲ್ಲರೂ ದೈವದ ಲೀಲೆಯನ್ನೇ ನೋಡುವುದರಲ್ಲಿ ತಲ್ಲೀನರಾಗಿದ್ದರು, ಭಕ್ತಿಯಲ್ಲಿ ಮುಳುಗಿದ್ದರು. ನಾನೂ ಸುಮ್ಮನಾದೆ.. ತನ್ನ ಸ್ಥಾನದಿಂದ ಓಡಿ ಬಂದ ದೈವ ಒಟ್ಟು ಆರು ಬಾರಿ ಈ ರೀತಿ ಕೆಂಡದ ಹಾಸಿಗೆ ಮೇಲೆ ಮಲಗಿ ಎದ್ದಿತು. ಅಲ್ಲೇ ಮಲಗಿರುತ್ತೇನೆ ಎಂಬಂತೆ ವರ್ತಿಸಿದಾಗಲೆಲ್ಲ ಜೊತೆಗಿದ್ದ ಎಂಟತ್ತು ಜನರು ದೈವದ ಪಾತ್ರಧಾರಿಯ ಸೊಂಟಕ್ಕೆ ಬಿಗಿದಿದ್ದ ಹಗ್ಗದಿಂದ ಮೇಲೆತ್ತಿ ತರುತ್ತಿದ್ದರು. ಈ ನಡುವೆ ಮುSವನ್ನು ಕೆಳಗೆ ಮಾಡಿ ಮಲಗಿಯೂ ದೈವ ತನ್ನ ಲೀಲೆ ತೋರಿಸಿತು. ದೈವದ ಮೇಲಿನ ನಂಬಿಕೆ ಎಷ್ಟೆಲ್ಲ ಸಾಹಸಗಳಿಗೆ ಪ್ರೇರಣೆಯಾಗುತ್ತದಲ್ಲವೇ..? ಇಲ್ಲೂ ಕೂಡ ಮೈಮೇಲೆ ದೈವದ ಆಗಮನವಾಗಿರಬಹುದು. ಆದರೆ, ಈ ರೀತಿಯ ಸಾಹಸಗಳನ್ನು ಮಾಡಲು ಎಂಟೆದೆ ಖಂಡಿತಾ ಬೇಕು. ಬೆಂಕಿಯ ಬಳಿ ಈ ರೀತಿ ಆಡುವುದೆಂದರೆ ಹುಡುಗಾಟವೇ..? ದೈವದ ವೇಷಧಾರಿ ಯಾರಿರಬಹುದು ಎಂಬುದನ್ನು ಆಮೇಲೆ ನೋಡಿದರಾಯಿತು ಎಂದುಕೊಂಡೆ.
 
 ಅಂದಹಾಗೆ, ಈ ಒತ್ತೆಕೋಲ ಮಾಡಿಸಿದವರು ಊರಿನ ಪ್ರಮುಖರಲ್ಲಿ ಒಬ್ಬರು. ಊರಿನ ಜನರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿವರ್ಷ ಈ ಕಾರ್ಯ ಆಯೋಜಿಸುತ್ತಾರೆ. ಊರಿನ ಕೂಲಿಯಾಳುಗಳೆಲ್ಲ ಅವರನ್ನು ದನಿಗಳೆಂದೇ ಕರೆಯುತ್ತಾರೆ. ಐತನಿಗೂ ಅವರೇ ದನಿಗಳು. ಆ ದನಿಗಳು ಈಗ ದೈವದ ಮುಂದೆ ಕೈ ಜೋಡಿಸಿದ್ದಾರೆ. ನಮ್ಮನ್ನು ನೀನೇ ರಕ್ಷಿಸಬೇಕು ಎಂದು ಬೇಡಿಕೊಳ್ಳುತ್ತಿದ್ದಾರೆ. ಅದಕ್ಕೆ ದೈವವೂ ಅವರಿಗೆ ಭರವಸೆ ನೀಡಿದೆ. ನಿನಗೇನೂ ಆಗದಂತೆ ನೋಡಿಕೊಳ್ಳಲು ನಾನಿದ್ದೇನೆ.. ಭಯ ಬೇಡ ಎಂದಿದೆ. ಕೈಯಲ್ಲಿದ್ದ ಕತ್ತಿಯನ್ನು ದನಿಗಳ ಹಣೆಗೆ ಮೇಲೆ ಹಿಡಿದು ಅಭಯ ಹಸ್ತ ನೀಡಿದೆ. ಊರ ಜನರಿಗೂ ಇದೇ ರೀತಿ ಅಭಯ ನೀಡಿದೆ. ಅಲ್ಲಿಗೆ ಪ್ರಧಾನ ಹಂತದ ಆರಾಧನೆ ಮುಗಿದಿದೆ. ಮತ್ತೇನಿದ್ದರೂ ಪ್ರಸಾದ ವಿತರಣೆ, ಕೋಳಿ ಬಲಿ.. ಇತ್ಯಾದಿ ಇತ್ಯಾದಿ.. ಆದರೆ, ನನ್ನ ಕುತೂಹಲಕ್ಕೆ ಉತ್ತರ ಹುಡುಕಿ ನಾನು ಹೊರಟೆ.
 
    ಅದಾಗಲೇ ಗಂಟೆ ಬೆಳಗಿನ ಒಂಬತ್ತು ದಾಟಿತ್ತು. ರಾತ್ರಿಯಿಡೀ ನಿದ್ರೆಗೆಟ್ಟಿದ್ದರೂ ಈ ಅಪರೂಪದ ಕಾರ್ಯಕ್ರಮದ ಮಧ್ಯೆ ಜೊಂಪು ಹತ್ತಲಿಲ್ಲ. ದೈವಸ್ಥಾನಕ್ಕೆ ಒಂದು ಸುತ್ತು ಬರೋಣ ಎಂದುಕೊಂಡು ನಾಲ್ಕು ಹೆಜ್ಜೆ ನಡೆದೆ. ಅದೋ ಅಲ್ಲಿ.. ಹಿಂಬದಿಯಲ್ಲಿ ಏನೋ ನಡೀತಿದೆ. ಓ.. ವಿಷ್ಣುಮೂರ್ತಿ ದೈವದ ವೇಷಧಾರಿ ತನ್ನ ಬಣ್ಣ ಕಳಚುತ್ತಿದ್ದಾನೆ. ಮೈಗೆ ಕಟ್ಟಿದ್ದ ಅಷ್ಟೂ ಪೋಷಾಕುಗಳನ್ನು ಒಂದೊಂದಾಗಿ ತೆಗೆಯುತ್ತಿದ್ದಾನೆ. ದೈವಸ್ಥಾನಕ್ಕೆ ಅಲಂಕಾರ ಮಾಡಿದ್ದ ಬಾಳೆ ಗಿಡದ ಎಲೆ ಅವನ ಮುಖಕ್ಕೆ ಅಡ್ಡಲಾಗಿ ನಿಂತಿರುವ ಕಾರಣ ಆ ವ್ಯಕ್ತಿ ಯಾರು ಎಂದು ತಿಳಿಯುತ್ತಿಲ್ಲ. ಹತ್ತಿರಕ್ಕೆ ಹೋಗುವಷ್ಟು ಸಲುಗೆ ತೋರಿದರೆ ಊರ ಮಂದಿ ಏನನ್ನುತ್ತಾರೋ ಎಂದುಕೊಂಡು ದೂರದಲ್ಲೇ ನಿಂತೆ.
  
    ಅಬ್ಬಾ ರಾತ್ರಿ ಎಂಥಾ ಅನುಭವ.. ಯಾವುದೋ ಬೇರೆಯದೇ ಲೋಕಕ್ಕೆ ಹೋದ ಹಾಗೆ.. ನಮ್ಮೂರಿನದ್ದೇ ಕಾರ್ಯಕ್ರಮ ಇದಾದರೂ, ಪಟ್ಟಣ ಸೇರಿದ ನನಗೆ ಇದು ಹೊಸದೇ. ತುಳುನಾಡಿನ ಜಾನಪದ ಸಂಸ್ಕತಿ ಅದೆಷ್ಟು ಶ್ರೀಮಂತ ಎಂದುಕೊಂಡೆ. ಇದೇ ಯೋಚನೆಯಲ್ಲಿದ್ದ ನನ್ನನ್ನು `ದನಿ'ಗಳ ಗಟ್ಟಿಯಾದ ಸ್ವರ ಎಚ್ಚರಿಸಿತು. `ಐತಾ.. ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ಮಾರಾಯ. ದೈವ ಪ್ರಸನ್ನವಾಗಿರುತ್ತದೆ. ಮುಂದಿನ ವರ್ಷವೂ ನೀನೇ ಭೂತ ಕಟ್ಟು' ಎಂದರು.. ಎರಡು ಮೂರು ಗಂಟೆ ಮೊದಲು ದನಿಗಳಿಗೆ ಅಭಯ ನೀಡಿದ್ದವನು ಮಡಚಿ ಕಟ್ಟಿದ್ದ ಪಂಚೆಯನ್ನು ಇಳಿಬಿಟ್ಟು ಬಗ್ಗಿ ನಿಂತು ಕೈ ಜೋಡಿಸಿ ದೈನ್ಯದಿಂದ `ಆಯ್ತು ದನಿ' ಎಂದ..!
----------------------------------------------------------------------------------

ಪದಾರ್ಥಗಳು (ಪದ+ಅರ್ಥಗಳು..!)

ಮೇಲೇರಿ = ದೈವ ಕಾರ್ಯಕ್ಕೆ ಅಚ್ಚುಕಟ್ಟಾಗಿ ಒಣ ಸೌದೆಯನ್ನು ಇಡುವುದು
ಕಂಬಾಯ್ = ಲುಂಗಿ
ಬೈಸಾರಿ = ಸಂಜೆ
ಬಾಲ್ದಿ = ಬಕೆಟ್
ಗರ್ನಾಲ್ = ದೊಡ್ಡ ಪಟಾಕಿ
 

(ಈ ಬರಹದಲ್ಲಿರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ. ಯಾವುದೇ ವ್ಯಕ್ತಿಗೆ, ಊರಿಗೆ ಸಂಬಂಧಿಸಿದ್ದಲ್ಲ)

Wednesday, September 16, 2009

ಬದುಕಲ್ಲಿ ಹಸಿರುಂಟು...

ಹಸಿರಲ್ಲಿ ನಾನುಂಟು ನೀನುಂಟು ಜೀವನವುಂಟು. ಬದುಕಿಗೆ ಆಸರೆ ಇಲ್ಲುಂಟು. ಸಮತೋಲಿತ ಪಯಣದಲ್ಲಿ ಹಿತವುಂಟು.

ಮಾತೆಯ ಮಡಿಲಲ್ಲಿ ಮುತ್ತುಂಟು, ಹಸಿದವಗೆ ಕೈ ತುತ್ತುಂಟು. ಹಿತ ಕಾಯುವ ಸಂಗವುಂಟು.
ಮನ, ಮನೆ ಇಲ್ಲುಂಟು. ಒಲವುಂಟು, ಒಲಿದ ಜೀವಗಳ ಮಿಲನದ ಸೊಗಸುಂಟು.
ಕನಸುಗಳಿಗೆ ಬಲಿತ ರೆಕ್ಕೆ ನೀಡುವ ಮಾರ್ಗವುಂಟು. ಸರಿ ದಾರಿ ತೋರುವ ಅನುಭವದ ಜೊತೆ ನನ್ನ ನಿನ್ನ ಪಯಣವುಂಟು.
ಸಾಗಿದ ಹಾದಿಯನೊಮ್ಮೆ ತಿರುಗಿ ನೋಡಿದರೆ ಎಲ್ಲೆಲ್ಲು ಹಸಿರಿನ ಚಾದರವೇ. ಕಲ್ಲು ಮುಳ್ಳು ನಮಗೇಕೆ, ಕೊನೆಯಲ್ಲಿ ಸಿಕ್ಕ ಹಸಿರೆ ನಮ್ಮ ಜೊತೆಯಿರಲು ಬದುಕಲ್ಲಿ ಖುಷಿಯುಂಟು...
** Please click on the images to see them clear.

Thursday, August 13, 2009

ಆಕಾಶದಿಂದ ಧರೆಗಿಳಿದ ರಂಭೆ...!

ಈ ಬಾರಿ ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಿದೆ. ಹೀಗಾಗಿ ರಾಜ್ಯದ ಸುಂದರ ಜಲಪಾತಗಳಲ್ಲಿ ಒಂದಾದ ಗಗನಚುಕ್ಕಿಯ ಸೌಂದರ್ಯ ಇಮ್ಮಡಿಯಾಗಿದೆ. ದೂರದೂರಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನಾನೂ ಅವರಲ್ಲಿ ಒಬ್ಬನಾಗಿ ಭೇಟಿ ನೀಡಿದ್ದೆ. ಕೆಲವು ಫೋಟೋಗಳು ಇಲ್ಲಿವೆ. ನೋಡಿ, ಅನಿಸಿಕೆ ತಿಳಿಸಿ.
ಶಿವನ ಸಮುದ್ರದ ಸುತ್ತಲೂ ಹಸಿರಿನ ಹೊದಿಕೆ. ಹಾಗೆ ನಮ್ಮ ದೃಷ್ಟಿಯನ್ನು ಸ್ವಲ್ಪ ಮೇಲಕ್ಕೆ ಹರಿಸಿದಾಗ ಕಾಣಿಸುವುದೇ ದೃಶ್ಯ ಕಾವ್ಯ. ಅಲ್ಲೇ ಎಲ್ಲೋ ದೂರದಲ್ಲಿ ಭೂಮಿತಾಯಿ ಮತ್ತು ಆಕಾಶ ಸುಖ-ದುಃಖ ವಿಚಾರಿಸಿಕೊಳ್ಳುತ್ತಿವೆಯೋ, ಅದೇ ರೀತಿ ಹತ್ತಿಯ ಉಂಡೆಯಂತೆ ಕಾಣುವ ಮೋಡವನ್ನು ತಮ್ಮ ಮಧ್ಯವರ್ತಿಯಾಗಿ ಇಟ್ಟುಕೊಂಡಿವೆಯ ಎನ್ನುವ ಸಂಶಯ ಸಹಜವಾಗಿ ಮೂಡುತ್ತಿದೆ...! ದೂರದಿಂದಲೇ ಕೈಬೀಸಿ ಕರೆಯುವ ಹಾಲಿನ ಹೊಳೆಯಂತಹ ಜಲಧಾರೆ. ನೋಡುತ್ತಾ ನಿಂತರೆ ಇನ್ನಷ್ಟು ನೋಡಬೇಕು ಅನಿಸುವ ರುದ್ರ ರಮಣೀಯತೆ. ಎದುರಿಗೇ ನನ್ನದೊಂದು ಕುಟೀರ ಇರಬಾರದೇ ಎನ್ನುವ ಒಳ ಮನಸ್ಸು..! ಧೋ ಎಂದು ಕಾವೇರಿ ಮಾತೆ ಕೆಳಗಿಳಿಯುತ್ತಿದ್ದರೆ ಅಲ್ಲೊಂದು ಮಂಜಿನ ಲೋಕದ ಸೃಷ್ಟಿ. ಆ ನೀರ ಹನಿಗಳ ನಡುವಿಂದ ಸೂರ್ಯ ರಶ್ಮಿ ಹಾಯ್ದು ಬಂದಾಗ ಮೂಡುವ ಕಾಮನ ಬಿಲ್ಲು. ಜೊತೆಗೆ ಬಾರದ ಪ್ರಿಯತಮೆಯ ನೆನೆಯುತ್ತಾ ಬಣ್ಣದ ಬಿಲ್ಲನ್ನು ದಿಟ್ಟಿಸುತ್ತಿದ್ದಂತೆ ಕಿಚಿಪಿಚಿ ಎನ್ನುತ್ತಾ ಅಲ್ಲೇ ಸುಳಿದಾಡುವ ಪ್ರಣಯ ಪಕ್ಷಿಗಳು...! ಹ್ನೂ..!! ಅದೇನೇ ಇರಲಿ, ಅಬ್ಬಾ..! ಈ ಪ್ರಕೃತಿ ಇಂತಹ ಅದೆಷ್ಟು ಅಚ್ಚರಿಗಳನ್ನು ತನ್ನ ಮಡಿಲಲ್ಲಿ ಹುದುಗಿಸಿ ಇಟ್ಟಿದೆಯೋ, ತಿಳಿದವರಾರು..?! ಅನ್ನೋ ಕುತೂಹಲ ಒಂದು ಕ್ಷಣ ನಮ್ಮನ್ನು ಕಾಡುತ್ತದೆ. ಒಟ್ಟಿನಲ್ಲಿ ಪ್ರತಿ ವರ್ಷವೂ ಇದೆ ರೀತಿ ಮಳೆಯಾಗಿ, ನಾಡಿನ ನದಿಗಳು ಭರ್ತಿಯಾಗಲಿ. ಉಣ್ಣುವ ಅನ್ನಕ್ಕೆ, ನೋಡುವ ಕಣ್ಣಿಗೆ ಸಂತಸ ನೀಡಲಿ ಎಂಬುದೇ ಸಕಲ ಜೀವ ರಾಶಿಯ ಪ್ರಾರ್ಥನೆಯಾಗಲಿ... ಅಲ್ಲವೇ...!?

Tuesday, June 30, 2009

ಪಥಾನುಯಾಯಿ

"ಅಪ್ಪಾ.. ನಮ್ಮ ತಲೆಮೇಲೆ ಎರಡು ಕಾಳು ಅಕ್ಷತೆ ಇಟ್ಟು ಮನದುಂಬಿ ಆಶೀರ್ವದಿಸಿ ಬಿಡು. ಅಷ್ಟೆ ಸಾಕು. ಅದನ್ನೇ ನೀನು ನನಗಾಗಿ ಧಾರೆಯಿತ್ತ ಸರ್ವಸ್ವ ಅಂತ ಭಾವಿಸಿ ಜೀವನ ಪರ್ಯಂತ ಸುಖಿಯಾಗಿರುತ್ತೇನೆ...''. ಮಗಳು ಪ್ರೀತಿ ತಾನು ಪ್ರೇಮಿಸಿ ಕದ್ದು ಮುಚ್ಚಿ ಮದುವೆಯಾದ ಆಕಾಶ್ ನೊಂದಿಗೆ ಮನೆಯೆದುರು ಗೋಗರೆಯುತ್ತಿದ್ದಳು. ಆದರೆ ತಂದೆ ರಾಜೀವ ತನ್ನ ಕಠಿಣ ನಿಲುವನ್ನು ಇನ್ನೂ ಬಿಗಿಗೊಳಿಸಿ, ''ನೀನು ನನ್ನ ಮಗಳೇ ಅಲ್ಲ !. ನಿನ್ನಮ್ಮ ಯಾವುದೋ ವಿಷ ಜನ್ತುವನ್ನ ಹಡೆದಿದ್ದಾಳೆ ಅಂತ ಭಾವಿಸಿ ಅಂದೇ ಎಲ್ಲಾ ಸಂಬಂಧಗಳನ್ನು ಮರೆತಾಗಿದೆ. ಇನ್ನೊಂದು ಕ್ಷಣ ನೀನು ನನ್ನೆದುರು ನೀನಿದ್ದರೂ ನಾನು ನಾನಗಿರೋಲ್ಲ...!'' ಎಂದು ಘರ್ಜಿಸಿದ. ಪ್ರೀತಿಯ ಪಕ್ಕದಲ್ಲೇ ನಿಂತಿದ್ದ ಆಕಾಶ್, ''ಆಗಿದ್ದೆಲ್ಲ ಒಂದು ಕೆಟ್ಟ ಕನಸು ಅಂತ ಮರೆತು ಬಿಡಿ ಮಾವಯ್ಯಾ... ನಿಮ್ಮ ಪ್ರಕಾರ ನಮ್ಮಿಂದ ತಪ್ಪು ಆಗಿದ್ದರೆ ಅದಕ್ಕೆ ಕ್ಷಮೆ ಬೇಡಲಾದ್ರು ಅವಕಾಶ ನೀಡಿ. ನಾನು ಇವಳನ್ನ ಯಾವುದೇ ಕೊರತೆ ಇಲ್ಲದ ಹಾಗೆ ಬಾಳಿಸ್ತಿನಿ...'' ಎಂದಾಗ ರಾಜೀವ, ''ಏನಂದೆ..? ಯಾವನೋ ಮಾವಯ್ಯ ನಿನಗೆ...?! ಇನ್ನೊಂದ್ಸಲ ಹಾಗೆ ಕರೆದರೆ ಪರಿಣಾಮ ನೆಟ್ಟಗಿರೋಲ್ಲ... ಮಾವಯ್ಯ ಅಂತೆ ಮಾವಯ್ಯ..!'' ಎಂದು ಕಿರುಚಾಡಿದ.
ಆಕಾಶ್ ಓರ್ವ ಶ್ರೀಮಂತ, ಸ್ಫುರದ್ರೂಪಿ ಯುವಕ. ಪ್ರತಿಷ್ಟಿತ ಬ್ಯುಸಿನೆಸ್ಸ್ ಮ್ಯಾನೇಜ್ಮೆಂಟ್ ಕಾಲೇಜ್ ನಲ್ಲಿ ಎಂ ಬಿ ಎ ವ್ಯಾಸಂಗ ಮಾಡಿದ್ದಾನೆ. ಊರಿನಲ್ಲಿ ತಂದೆ ಗಳಿಸಿದ ಆಸ್ತಿಯೂ ಸಾಕಷ್ಟಿದೆ. ಅದು ಸಾಲದು ಎಂಬಂತೆ, ನಗರದಲ್ಲಿ ಎರಡು ಕಡೆ ಬೇರೆ ಬೇರೆ ಉದ್ಯಮಗಳು... ತನ್ನ ಬುದ್ಧಿವಂತಿಕೆಯಿಂದ ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯಜಾಲವನ್ನು ವಿಸ್ತರಿಸಿಕೊಳ್ಳುತ್ತಿದ್ದಾನೆ. ಇವನ ಚಾಕಚಕ್ಯತೆ ಕಂಡು ಮಹಾನ್ ಎನಿಸಿಕೊಂಡ ಉದ್ದಿಮೆದಾರರೂ ಅಸೂಯೆ ಪಟ್ಟಿದುಂಟು. ಆಕಾಶ್ ಮತ್ತು ಪ್ರೀತಿ ಕಳೆದ ಒಂದು ವರ್ಷದಿಂದ ಗಾಢವಾಗಿ ಪ್ರೇಮಿಸುತ್ತಿದ್ದವರು. ಈ ವಿಚಾರ ತಿಳಿಯದೆ ರಾಜೀವ, ನಾಲ್ಕು ತಿಂಗಳಿಂದ ಬಿಎಸ್ಸಿ ಓದಿರುವ ಮಗಳಿಗೆ ಮದುವೆ ಮಾಡಿಸಲು ಜೋರಾಗಿ ಓಡಾಡುತ್ತಿದ್ದ. ಅದು ಇದು ಎಂದು ಹೇಳಿ ಬಂದ ಹುಡುಗರನ್ನ ಪ್ರೀತಿ ತಿರಸ್ಕರಿಸಿದ್ದಾಯಿತು. ಅಲ್ಲದೆ ಆಕಾಶ್ ಜೊತೆ ವಿಚಾರ ಮಂಡಿಸಿದಳು. ತಮ್ಮಿಬ್ಬರ ಪ್ರಣಯದ ಕುರಿತು ಮನೆಯಲ್ಲಿ ಹೇಳು ಎಂದರೆ ಪ್ರೀತಿ ಕೋಪಿಷ್ಠ ತಂದೆಯ ಬಗ್ಗೆ ವರ್ಣನೆ ಮಾಡಿದಳು...! ಹೋಗಲಿ, ತಾನೆ ಮಾತಾಡುವುದಾಗಿ ಹೇಳಿದರೆ ಪ್ರೀತಿಯಿಂದ ಆತ್ಮಹತ್ಯೆಯ ಬೆದರಿಕೆ... ಇದೊಳ್ಳೆ ಕಥೆಯಾಯಿತಲ್ಲ ಎಂದುಕೊಂಡ ಆಕಾಶ್, ಕೊನೆಗೆ ಎರಡು ದಿನಗಳ ಹಿಂದೆ ಘಾಟಿ ಸುಬ್ರಮಣ್ಯನ ಮುಂದೆ ಪ್ರೀತಿಗೆ ತಾಳಿ ಕಟ್ಟಿದ. ಕಾಣೆಯಾದ ಮಗಳನ್ನು ಹುಡುಕಿ ರಾಜೀವ ಹೈರಾಣಾಗಿದ್ದ. ಪೊಲೀಸರಿಗೆ ದೂರು ನೀಡಿದ್ದು ಆಯ್ತು. ಇಂದು ಮಗಳನ್ನ ಈ ರೂಪದಲ್ಲಿ ನೋಡಿದ್ದ ರಾಜೀವನ ಬಿಪಿ ಸಹಜವಾಗೇ ನೆತ್ತಿಗೇರಿತ್ತು. ಆಕಾಶ್ ಮತ್ತು ಪ್ರೀತಿ ರಾಜೀವನನ್ನು 'ಕ್ಷಮಿಸಿ' ಎಂದು ಪರಿ ಪರಿಯಾಗಿ ಬೇಡಿಕೊಂಡರು. ಆದರೆ, ಯಾವ ರಾಜಿಗೂ ಮಣಿಯದ ರಾಜೀವ, 'ಪ್ರೀತಿ ತನ್ನ ಮಗಳೇ ಅಲ್ಲ. ಇನ್ನು ಮುಂದೆ ತನಗೂ ಅವಳಿಗೂ ಯಾವುದೇ ಸಂಬಂಧವಿಲ್ಲ' ಎಂದು ಕಡ್ಡಿ ಮುರಿದಂತೆ ಹೇಳಿದ. ಇಷ್ಟು ಹೊತ್ತು ಸಂಯಮದಿಂದ ವರ್ತಿಸಿದ್ದ ಆಕಾಶ್, ತಾಳ್ಮೆ ಕಳೆದುಕೊಂಡ. ಪ್ರೀತಿಯ ಕೈ ಹಿಡಿದು, ''ನಡಿಯೇ ಪ್ರೀತಿ, ನಾವೇನೋ ತಪ್ಪು ಮಾಡಿದ್ದೇವೆ ನಿಜ. ಅದನ್ನ ಒಪ್ಪಿಕೊಂಡು ಕ್ಸಮಿಸಿ ಎಂದು ಕೇಳಲು ಇವರ ಬಳಿಗೆ ಬಂದದ್ದೆ ತಪ್ಪಾಯ್ತು.! ಇವರ ಹಠ ಇವರಿಗೆ. ನಮ್ಮ ಹಠ ನಮಗೆ...!'' ಎಂದ. ''ಆಕಾಶ್...'' ಎಂದ ಪ್ರೀತಿಯ ಮಾತನ್ನು ಅರ್ಧಕ್ಕೇ ನಿಲ್ಲಿಸಿದ ಆಕಾಶ್, ''ಅಲ್ವೇ ಸಂಬಂಧವೇ ಇಲ್ಲ ಅಂತ ಹೇಳಿದ ಮೇಲೆ ಎಂಥ ಮಾತು...?! ಮುಂದೆ ಬಾಳಬೇಕಾದವರು ನಾವೇ ಹೊರತು ಅವರಲ್ಲ..'' ಎನ್ನುತ್ತಾ ಕಾರಿನ ಬಳಿ ಕರೆದೊಯ್ದ. ರಾಜೀವ ಹೇಳಿದಂತೆ ಮಾಡಿ ತೋರಿಸುವವನೆಂದು ಪ್ರೀತಿಗೆ ಚೆನ್ನಾಗಿ ತಿಳಿದಿದೆ. ಅದರ ಅನುಭವ ಈ ಮೊದಲು ಸಾಕಷ್ಟು ಬಾರಿ ಆಗಿದೆ. ಈಗ 'ಸಂಬಂಧವೇ ಇಲ್ಲ' ಎಂದಾಗಲಂತೂ ಆಕಾಶ್ನನ್ನೇ ತೊರೆದು ಅಪ್ಪನ ಪಾದಗಳಲ್ಲಿ ಬಿದ್ದು 'ಕ್ಷಮಿಸು' ಎಂದು ಕೇಳಬೇಕು ಎನಿಸುತ್ತಿದೆ. ಇದಕ್ಕೂ ಮೊದಲು ಅದೆಷ್ಟು ಸಲ ಅಪ್ಪ ನನ್ನನ್ನು ಕ್ಷಮಿಸಿಲ್ಲ..! ಕ್ಷಣಗಾಲ ಕೋಪಿಸಿಕೊಂಡ ಅಪ್ಪ ನಂತರ ನಾನು ಕೇಳಿದ್ದನ್ನು ಕೊಡಿಸಿದ ದಿನಗಳು ಅವೆಷ್ಟೋ..! ಆದರೆ, ಇದು ಹುಡುಗಾಟದ ವಿಚಾರವಲ್ಲ. ಜೀವನದ ಪ್ರಶ್ನೆ. ತನಗೆ ಆಕಾಶ್ ಅದಾಗಲೇ ದೇವರ ಮುಂದೆ ತಾಳಿ ಕಟ್ಟಿ ಜೀವನ ಪೂರ್ತಿ ಜೊತೆಯಾಗಿರುವುದಾಗಿ ಭಾಷೆ ನೀಡಿದ್ದಾನೆ. ಮನಸ್ಸಿನ ಈ ಎಲ್ಲಾ ಇರುಸು ಮುರುಸುಗಳನ್ನ ಅರಗಿಸಿಕೊಳ್ಳಲಾಗದೆ ಶಿಲೆಯಂತೆ ಕಾರಿನ ಬಳಿಯೇ ನಿಂತಿದ್ದಳು.
ಈ ಎಲ್ಲ ಘಟನೆಗಳ ಹಿನ್ನೆಲೆ ಅರಿತಿದ್ದ ಕೆಲಸದಾಕೆ ನಿಂಗವ್ವ ಮಧ್ಯ ಪ್ರವೇಶಿಸಿ, ''ಯಜಮಾನ್ರೆ...! ಎಷ್ಟಾರ ಚಿಕ್ಕಮ್ಮನೋರು ನಿಮ್ಮ ಮಗಳೆ ತಾನೆ... ನಿಮ್ಮ ಹಾದಿನೆ ಹಿಡ್ದವ್ರೆ...!!'' ಎಂದಳು. ಅವಳಾಡಿದ ಕೊನೆಯ ವಾಕ್ಯ ಅದ್ಯಾಕೋ ರಾಜೀವನ ಮನಸ್ಸಿಗೆ ಸೂಜಿ ಚುಚ್ಚಿದ ಅನುಭವ ನೀಡಿತು. ತನ್ನ ಬಾಯ್ತಪ್ಪಿ ಬಂದ ಮಾತಿನಿಂದ ನಿಂಗವ್ವ ಕೂಡ ತಬ್ಬಿಬ್ಬಾದಳು.
'ಹೌದು...! ಸುಮಾರು ೨೨ ವರ್ಷಗಳ ಹಿಂದಿನ ಕಥೆ. ಇಂದಿಗೂ ಆ ದಿನಾಂಕ ಚೆನ್ನಾಗಿ ನೆನಪಿದೆ. ೧೯೮೪, ಜನವರಿ ೨೮. ಆಕೆ ಸುಲೋಚನ!. ಅವಳೊಂದಿಗೆ ತನ್ನ ಮದುವೆಯೆಂದು ಅಪ್ಪಾಜಿ ನಿರ್ಧರಿಸಿದ್ದರು. ಆದರೆ, ಆ ಮದುವೆ ಇಷ್ಟವಿಲ್ಲದ ನಾನು, ನನ್ನ ಪ್ರಿಯತಮೆ ಶ್ರೀಮತಿಯು ಜನವರಿ ೨೪ರ ರಾತ್ರಿ ರಾಮ ಮಂದಿರದಲ್ಲಿ ಹಾರ ಬದಲಾಯಿಸಿ 'ಮದುವೆ'ಯಾಗಿ ಬಂದಿರಲಿಲ್ಲವೇ...?! ಅಪ್ಪಾಜಿಯವರ ಕೈಯಿಂದ ಎಷ್ಟು ಹೊಡೆತ ಬೀಳುವುದೋ, ಅಥವಾ ಹೃದಯ ಖಾಯಿಲೆಯಿಂದ ಬಳಲುತ್ತಿದ್ದ ಅಮ್ಮನಿಗೆ ಏನಾದರು ಹೆಚ್ಚು ಕಡಿಮೆಯಾದೀತು ಎಂಬ ಭಯದಿಂದ ಈ ವಿಚಾರವನ್ನು ಮುರು ದಿನಗಳ ಕಾಲ ಅದೆಷ್ಟು ಕಷ್ಟ ಪಟ್ಟು ಮುಚ್ಚಿಟ್ಟಿದ್ದೆ...! ನಂತರ ಮದುವೆಯ ಮುನ್ನಾ ದಿನವಾದ ೨೭ರ ರಾತ್ರಿ ಇದೇ ನಿಂಗವ್ವ ನ ಕೈಯಲ್ಲಿ ಒಂದು ಚೀಟಿಯಿತ್ತು, ನನ್ನ ಪರವಾಗಿರುತ್ತಿದ್ದ ಅಣ್ಣನಿಗೆ ಕೊಡುವಂತೆ ಮತ್ತು ಆ ರೀತಿಯಲ್ಲಿ ಅಪ್ಪಾಜಿಗೆ ವಿಷಯ ತಿಳಿಸುವಂತೆ ಮಾಡಿರಲಿಲ್ಲವೇ..?! ಆ ನಂತರ ಸುಲೋಚನ ನ ಕಡೆಯವರು ನಿರೀಕ್ಷೆಗೂ ಮೀರಿ ಗಲಾಟೆ ಮಾಡಿದ್ದು, ನನಗೂ ಅಪ್ಪಾಜಿಗೂ ಛೀಮಾರಿ ಹಾಕಿದ್ದು... ಎಲ್ಲ ಈಗ ಇತಿಹಾಸ..! ಆ ಅನಿರೀಕ್ಷಿತ ಘಟನೆಯಿಂದ ಕುಪಿತಗೊಂಡ ಅಪ್ಪಾಜಿ ಇದೇ ರೀತಿ ನಮ್ಮನ್ನೂ ಮನೆಯಿಂದ ಹೊರಹಾಕಿದ್ದರು. ಆದರೆ, ಪರಿಪರಿಯಾಗಿ ಬೇಡಿಕೊಂಡಾಗ ನನ್ನನ್ನೂ, ಪ್ರಿಯತಮೆ ಶ್ರೀಮತಿಯನ್ನೂ ಮನೆಗೆ ಸೇರಿಸಿಕೊಂಡಿದ್ದರು. ಅದೊಂದು ಒಳ್ಳೆ ದಿನ, ಮುಹೂರ್ತ ನಿಶ್ಚಯ ಮಾಡಿ ಸೊಸೆಯನ್ನು ಮನೆ-ಮನ ತುಂಬಿಕೊಂಡಿದ್ದರು'. ಇದೆಲ್ಲವೂ ಒಂದೇ ಕ್ಷಣದಲ್ಲೇ ಮನಃಪಟಲದಲ್ಲಿ ಸುಳಿದು ಹೋಯಿತು.
'ನನ್ನ ಮತ್ತು ಶ್ರೀಮತಿಯ ಒಲವಿನ ಫಲವೇ ಈ ಮಗಳು. ಅದಕ್ಕೇ ಅವಳಿಗೆ 'ಪ್ರೀತಿ' ಎಂದು ನಾಮಕರಣ ಮಾಡಿದ್ದು. ಅದೂ ಅಪ್ಪಾಜಿಯವರ ಸಲಹೆಯಂತೆಯೇ..! ಆದರೆ, ದುರಾದೃಷ್ಟವಶಾತ್ ಪ್ರೀತಿ ಹದಿನೈದರ ಹರೆಯಕ್ಕೆ ಬಂದಾಗ ಅವಳ ತಾಯಿ ವಿಷ ಜಂತುವಿನ ಕಡಿತಕ್ಕೆ ಒಳಗಾಗಿ ನನ್ನಿಂದ ದೂರವಾದಳು'. ತನ್ನ ಬದುಕಿನ ವಿವಿಧ ಘಟನಾವಳಿಗಳನ್ನು ನೆನೆದು ರಾಜೀವನ ಕಣ್ಣಂಚು ಒದ್ದೆಯಾಗಿತ್ತು, ಮನಸ್ಸು ತಡೆಯಲಾರದಷ್ಟು ಭಾರವಾಗಿತ್ತು.
'ಇಲ್ಲ..! ತಾನು ದುಡುಕಿದೆ. ಆಡುವುದು ಒಂದು ಮಾಡುವುದು ಇನ್ನೊಂದು ಎಂದಾಗಬಾರದು. ಅವರನ್ನ ಈಗಲೇ ಮನೆಯೊಳಕ್ಕೆ ಸೇರಿಸಿಕೊಳ್ಳಬೇಕು. ಇಬ್ಬರನ್ನೂ ದೀರ್ಘ ಕಾಲ ಬಾಳುವಂತೆ ಆಶೀರ್ವದಿಸಬೇಕು. ಎಷ್ಟಾದರೂ ಅವಳು ನನ್ನ ಮಗಳು. ಅತ್ಯುತ್ತಮವಾದುದೆ ಅವಳ ಆಯ್ಕೆ ಆಗಿರುತ್ತದೆ.' ಎಂದುಕೊಂಡು, ''ಪ್ರೀತೀ...!'' ಎಂದು ಕೂಗುತ್ತಾ ಮನೆಯಿಂದ ಹೊರಗೋಡಿ ಬಂದ. ಆದರೆ, ಅವರ ಕಾರು ಅದಾಗಲೇ ಕಣ್ಣಳತೆಯಿಂದ ದೂರವಾಗಿತ್ತು. ಮಂಜಾದ ಕಣ್ಣನ್ನು ಒರೆಸಿಕೊಳ್ಳುತ್ತಾ, ಕಾರು ಹೋದ ದಿಕ್ಕಿನಲ್ಲೇ ತನ್ನೆರಡೂ ಕೈಗಳನ್ನು ಮೇಲೆತ್ತಿ ''ದೀರ್ಘ ಸುಮಂಗಲಿಯಾಗಿ ಬಾಳಮ್ಮಾ...!'' ಎಂದು ಮನದುಂಬಿ ರಾಜೀವ ಆಶೀರ್ವದಿಸಿದ.

Tuesday, June 23, 2009

ಒಂದಿಷ್ಟು ಫೋಟೋಗಳು...

ನನ್ನ ಕ್ಯಾಮರಾ ಕಣ್ಣಿಗೆ ಬಿದ್ದ ಇನ್ನೂ ಒಂದಷ್ಟು ಫೋಟೋಗಳನ್ನು ಇಲ್ಲಿ ಅಂಟಿಸಿದ್ದೇನೆ... ಹಾಗೆ ಸುಮ್ಮನೆ ಅಷ್ಟೆ...! ನೋಡಿ ಎಂಜಾಯ್ ಮಾಡಿ...!
ಹನಿ ಹನಿಯಾಗಿ ಜಿನುಗುತ್ತಿದೆ ಒಲವ ಧಾರೆ...!
ಊಟಿಯ ಒಂದು ಪರ್ವತ. ನೋಡ್ತಾ ಇದ್ರೆ ಹಾಗೆ ಇದ್ದು ಬಿಡುವಾಂತ ಕಾಣ್ತದೆ..!

ಇದೂ ಅಷ್ಟೆ... ಊಟಿಯಲ್ಲಿ ನನ್ನ ಕ್ಯಾಮೆರಾಕ್ಕೆ ಸಿಕ್ಕಿದ್ದು...!

ಚೆಂದದ ಹೂವು ಮಾರಾಯ್ರೆ...!

ಅದಕ್ಕೊಂದು ಪಾತರಗಿತ್ತಿ...!
ಮನಸ್ಸಿಗೆ ಖುಷಿ ಕೊಡುವ ಇಂತಹ ವಿಚಾರಗಳನ್ನು ಒಬ್ರೇ ಇಟ್ಟುಕೊಳ್ಳಬಾರದು ಅಂತ ಹೇಳೋದು ನನ್ನ ವಾದ. ಹಾಗಾಗಿ ಈ ಫೋಟೋಗಳನ್ನ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ... ಹೇಗೆ ಉಂಟು ಅಂತ ಹೇಳ್ತಿರಿ ಅಲ್ವ?